Thursday, 16 April 2020

Dr. B R Ambedkhar and My Life










ಬಹಿರಂಗ ಎನ್ನುವುದಕ್ಕಿಂತಲೂ ಒಂದು ಮುಕ್ತ ಪತ್ರ.

ಖಾಸಗಿಯಾರಬೇಕಿತ್ತೆನೋ ಅಂತಾ ಅನ್ನಿಸಿದ ಮೇಲೆಯೂ ಪತ್ರ ವಸೀ ದೀರ್ಘವಿರುವ ಕಾರಣ ಯಾರೂ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ ಮತ್ತು ಹೆಚ್ಚಿನವರು ಓದಲಾರರೆಂಬ ಮತ್ತು ದಾಖಲಾಗಲಿ ಎಂಬ ಕಾರಣದಿಂದ ಇಲ್ಲಿ ಪ್ರಕಟ.

ಚಾಮರಾಜನಗರದ ದೀನಬಂಧು ಸಂಸ್ಥೆಯ ಸಂಸ್ಥಾಪಕರು, ಗೌರವ ಕಾರ್ಯದರ್ಶಿಗಳಾದ ಪ್ರೋ. ಜಿ.ಎಸ್.ಜಯದೇವಣ್ಣನರಿಗೆ ಬರೆದ ಪತ್ರ.
ನನಗೆ ಪುನರ್ಜನ್ಮ ನೀಡಿದ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಬಗ್ಗೆ, ಅಂಬೇಡ್ಕರ್ ಮತ್ತು ಗಾಂಧೀಜಿ ಆಶಯಗಳನ್ನು ಸಕಾರಗೊಳಿಸುತ್ತಿರುವ ದೀನಬಂಧು ಸಂಸ್ಥೆಯ ಸಾನಿಧ್ಯಕ್ಕೆ ನನ್ನ ಕುಟುಂಬವು ಸ್ಥಳಾಂತರಗೊಳ್ಳಲು ಪ್ರೇರಣೆಯಾದ ಅಂಶದ ಬಗ್ಗೆ ತೊದಲ್ನುಡಿಗಳಲ್ಲಿ ವಿವರಿಸಿರುವೆ.
-----------------------------------------------------------------
ಪ್ರೀತಿಯ ಅಣ್ಣನವರಿಗೆ ಗೌರವ‌ಪೂರ್ವಕ‌ ಮತ್ತು ಪ್ರೀತಿಪೂರ್ವಕ ಪ್ರಣಾಮಗಳು.
ಶಾಲೆಯಲ್ಲಿರುವ ಗಾಂಧೀಜಿ ಮತ್ತು ಅಂಬೇಡ್ಕರ್ ರವರ ಪೋಟೊಗಳು‌ ನನಗೆ ಬೇಕು..ಖರ್ಚು ಭರಿಸಲು ಸಿದ್ಧ.

ನಿಮ್ಮ ಬರಹ ಮತ್ತು ವ್ಯಕ್ತಿತ್ವದೊಟ್ಟಿಗೆ ಶಾಲೆಯ ಮುಂಭಾಗದಲ್ಲಿರುವ ಬುದ್ಧಣ್ಣ, ಆಶ್ರಮದಲ್ಲಿರುವ ಗಾಂಧೀ ಮಹಾತ್ಮ ಹಾಗೂ ಶಾಲೆಯಲ್ಲಿನ ಗಾಂಧೀಜಿ ಮತ್ತು ಬಾಬಾ ಸಾಹೇಬರ ಪೋಟೊಗಳು ನಾನು ದೀನಬಂಧುಗೆ ಬರಲು ಪ್ರಮುಖ ಕಾರಣ. ಅಂದರೆ ಈ ಮಹಾನ್ ವ್ಯಕ್ತಿಗಳ ಸಂದೇಶಗಳನ್ನು ಸಾಕಾರಗೊಳಿಸುವ ಚೇತನಗಳ ಜೊತೆ ಇರುವ ಆಶೀರ್ವಾದ ಮತ್ತು ಸಾನಿಧ್ಯಕ್ಕಾಗಿ. ಏನೂ ಮಾಡದೇ ಸುಮ್ಮನೇ ಇರುವುದರ ಮೂಲಕ ತಪ್ಪು ಮಾರ್ಗ ತುಳಿಯುವುದರಿಂದ ಹೊರತಾಗಿ ಜಡ‌ವಾಗಿರುವುದು ನನಗೆ ನೆಮ್ಮದಿಯೇ ಸರಿ!.

ನಾನು ಹುಟ್ಟಿದ್ದು ೧೯೮೨ರಲ್ಲಿ ಎರಡನೇ ಮಗನಾಗಿ. ಅಪ್ಪನಿಗೆ ಮೊದಲ ಮಗುವೇ ಹೆಣ್ಣಾಗಲೀ ಎಂಬ ಹೆಬ್ಬಯಕೆ ಇತ್ತು. ಆದರೆ ಹುಟ್ಡಿದ್ದು ಗಂಡು. ನೋಡಲು ಮುದ್ದು, ಸಹಿಸಿಕೊಂಡರು. ಎರಡನೇಯದಾದರೂ ಹೆಣ್ಣಾಗಲೀ ಎಂಬ ತೀವ್ರ ನಿರೀಕ್ಷೆ. ಅಮ್ಮ ಮತ್ತೇ ಗರ್ಭಿಣಿ. ಆದರೆ ಒಳಗೊಳಗೆ ತೀವ್ರ ತಳಮಳ, ಮತ್ತೇ ಗಂಡಾದರೆ ಎಂಬ ಕಾರಣಕ್ಕೆ. ಆಗಾಗಿ ಗರ್ಭಪಾತಕ್ಕೆ ಪ್ರಯತ್ನ ಪಟ್ಟಿದ್ದು ವ್ಯರ್ಥವಾಗಿ, ಹುಟ್ಡಿದ್ದು ನಾನು. ನೋಡಲು ಮಂದ ಬಣ್ಣ, ಬೆಳೆಯುತ್ತಾ ಬೆಳೆಯುತ್ತಾ ಮಂಕು ಕವಿದ ಮಂದ ಹುಡುಗನಂತೆ ಹೆತ್ತವರಿಗೆ ದೊಡ್ಡವರಿಗೆ ಕಾಣಲಾರಂಭಿಸಿದೆ. ಯಾವುದಕ್ಕೂ ಹಠವಿಲ್ಲ, ತುಂಟತನವಿಲ್ಲ. ಅಪ್ಪನ ಕೋಪ ಮತ್ತು ನಿರ್ಲಕ್ಷ್ಯಕ್ಕೆ ತುತ್ತಾಗುತ್ತಿದ್ದೆ. ಇದಿಷ್ಡೂ ಅಮ್ಮ ಹೇಳಿದ್ದು. ನಾಲ್ಕುವರೆ ವರ್ಷ ತುಂಬಿದ ನಂತರ ಅಪ್ಪ ಕೆಲಸ ಮಾಡುತ್ತಿದ್ದ ಮನೆಯ ಹತ್ತಿರದಲ್ಲೆ ಇದ್ದ ಪ್ರಾಥಮಿಕ ಶಾಲೆಗೆ ಕರೆದುಕೊಂಡು ಹೋಗುತ್ತಿದ್ದರು. ಒಮ್ಮೆ ಅಪ್ಪ ಸ್ಲೇಟಿನಲ್ಲಿ ಅ, ಆ ಅಕ್ಷಗಳನ್ನು ಉಚ್ಚರಿಸುತ್ತಾ ಬರೆದು, ನನಗೂ ಸಹ ಉಚ್ಚರಿಸುತ್ತಾ ಅಕ್ಷರಗಳನ್ನು ತಿದ್ದಲು ಹೇಳಿದರು. ಆದರೆ ನಾನು ಏನೂಕ್ಕೋ ಯಾವದಕ್ಕೂ ಪ್ರತಿಕ್ರಿಯೆ ತೋರದಿದ್ದಾಗ ಅಪ್ಪನ ಕೋಪ ನೆತ್ತಿಗೇರಿತು. ಅಪ್ಪ ಬೀಡಿ ಸೇದುತ್ತಿದ್ದ ಕಾರಣ ಜೇಬಿನಲ್ಲಿದ್ದ ಬೆಂಕಿ ಪಟ್ಟಣದಿಂದ ಕಡ್ಡಿ ಗೀರಿ ನನ್ನ ಕಾಲ ಬೆರಳಿಗೆ ಬೆಂಕಿ ತಾಕಿಸಿದರು. ಆದರೂ ನಾನು ಬಾಯಿ ಬಿಡಲಿಲ್ಲ. ಮೇಜಿನ ಮೇಲೆ ಕೂತಿದ್ದ ನನ್ನನ್ನು ಅನಾಮತ್ತು ಮೇಲಕ್ಕೆತ್ತಿದ್ದ ಅಪ್ಪ, ನಾನು ಬಾಯಿ ಬಿಡದಿದ್ದರೆ ಕೆಳಗೆ ಬಿಸಾಕುತ್ತೇನೆ ಎಂದು ಹೆದರಿಕೆಯ ಪ್ರಯತ್ನವನ್ನು ಅಪ್ಪ ಮುಂದುವರೆಸುತ್ತಿರುವಾಗಲೇ, ಅಪ್ಪನ ಸಹದ್ಯೋಗಿ ಉಮಾಮಹೇಶ್ವರ್ ಅಂಕಲ್ ಅಪ್ಪನ ಕೈಗಳಿಂದ ನನ್ನನ್ನು ಬಿಡಿಸಿ ಅವರ‌ ಎದೆಗವುಚಿಕೊಂಡರು.ಅದೇ ಮೊಟ್ಟಮೊದಲು ಗಂಡಸ್ಸಿನ ಒರ್ವನ ಅಪ್ಪ ಕೊಡಬಹುದಾದ ಹಿತವಾದ ಸಂರಕ್ಷಣೆಯ ಬೆಚ್ಚುಗೆಯ ಅಪ್ಪುಗೆ ದೊರಕಿತ್ತು. ಅಪ್ಪ ಹಿರಣ್ಯ ಕಶ್ಯಪನಂತೆ ಉಗ್ರವಾಗಿ ಕಾಣುತ್ತಿದ್ದರೆ, ನನಗೆ ಭಕ್ತ ಪ್ರಹ್ಲಾದನಿಗರಬಹುದಾದ ಯಾವ ಆತ್ಮವಿಶ್ವಾಸವೂ, ಧೈರ್ಯವೂ ಇರಲಿಲ್ಲ. ಮುಂದೆ ನನ್ನ ಶಾಲಾ ಶಿಕ್ಷಣ ಆರಂಭವಾಗುವರೆಗೂ ನನ್ನನ್ನು ಉಮಾಮಹೇಶ್ವರ್ ಸರ್ ನಾನು ಎಚ್ಚರವಿದ್ದಾಗಲೆಲ್ಲಾ ನನ್ನನ್ನು ಎತ್ತಿಕೊಂಡೆ ಇರುತ್ತಿದ್ದರು. ಅಪ್ಪನ ದೈಹಿಕ ಸ್ಪರ್ಶದಿಂದ ಮತ್ತು ಭಾವನಾತ್ಮಕ ವಲಯದಿಂದ ದೂರ ಉಳಿದೆ.

ಮುಂದೆ ಶಾಲೆಗೆ ಸೇರುವ ಸಮಯ ಬಂದಾಗ ಚಿಕ್ಕಮಗಳೂರಿನಲ್ಲಿದ್ದ ನನ್ನ ತಂದೆಯ ಅಣ್ಣ ದೇವಿರಪ್ಪ-ತಾಯಿಯ ಅಕ್ಕ ಭಾಗ್ಯಮ್ಮ ಇವರ ಬಳಿಗೆ ಕಲಿಯಲು ಹೋಗಬೇಕಾಯಿತು. ನನ್ನನ್ನು ಕಳುಹಿಸುವಾಗ ಅಮ್ಮ ಬಿಕ್ಕಿ ಬಿಕ್ಕಿ ಅಳುತ್ತಿದ್ದಳು. ಏಕೆಂದರೆ ಅಣ್ಣನನ್ನು ಮೂರು‌ವರ್ಷ ಇರುವಾಗಲೇ ಅವರೊಟ್ಟಿಗೆ  ಓದಲು ಕಳುಹಿಸಲಾಗಿತ್ತು. ದೊಡ್ಡಪ್ಪನವರಿಗೆ ತಮ್ಮ ಒಡಹುಟ್ಟಿದವರೆಲ್ಲರೂ, ಬಂಧುಗಳೆಲ್ಲರೂ ಉತ್ತಮ ಬದುಕು ನಡೆಸಬೇಕೆಂಬ ಕಾರಣಕ್ಕೆ ತಮ್ಮ-ತಂಗಿಯರ ಮಕ್ಕಳನ್ನೂ ಸಹ ತಮ್ಮ ಸುಪರ್ದಿಯಲ್ಲಿ ಶಿಕ್ಷಣ, ಬದುಕು ಕೊಡಲಾರಂಭಿಸಿದರು. ಅವರಿಗೆ ಯಾವುದೇ ಗಟ್ಟಿ ಕೆಲಸ, ಆದಾಯವಿಲ್ಲದಿದ್ದರೂ ಹೆಸರಿಗೆ ತಕ್ಕಂತೆ ದೇವರಾಗಿದ್ದರು. ನಾನು ಚಿಕ್ಕಮಗಳೂರಿಗೆ ಹೊದಾಗ ಮೂರು ಅಂಕಣದ ಒಂದು ಪುಟ್ಟ ಬಾಡಿಗೆ ಮನೆ. ಆದರೆ ಮನೆಯಲ್ಲಿ ನಾವು ಇದ್ದದ್ದು ೧೧ ಜನ.ಮುಂದೆ ದೊಡ್ಡಪ್ಪನವರಿಗೆ ಕ್ಲರ್ಕ್ ಕೆಲಸ ಸಿಕ್ಕಿತು. ದೊಡ್ಡ ಗುಣಗಳ ದೊಡ್ಡಪ್ಪ ನಮ್ಮನ್ನು ಬಹಳ ಅಕ್ಕರೆಯಿಂದಲೇ ಸಾಕುತ್ತಿದ್ದರು. ಅವರನ್ನೂ ಇಂದಿಗೂ-ಎಂದಿಗೂ ನಾವೆಲ್ಲರೂ ಅಪ್ಪಾಜಿ ಅಂತಲೇ ಕರೆಯುತ್ತೇವೆ.

೧೯೯೦-೯೧ನೇ ಸಾಲು, ಅಷ್ಟರಲ್ಲಾಗಲೇ ದೊಡ್ಡಪನವರಿಗೆ ದಾವಣಗೆರೆಗೆ ವರ್ಗವಾಗಿತ್ತು. ಏನೂ ದುರ್ದೈವವೋ ಶಾಲೆಗೆ ಹೋಗುತ್ತಿದ್ದ ಏಳು ಮಕ್ಕಳಲ್ಲಿ ಒಂದು ತರಗತಿ ಮುಂದಿದ್ದ ಮೂರು ಗಂಡು ಮಕ್ಕಳು ಪ್ರತಿಷ್ಟಿತ ಅಂಗ್ಲ ಮಾಧ್ಯಮದ Loods Boys ಶಾಲೆಗೆ ಮತ್ತು ಉಳಿದ ನನ್ನ ಒರಗೆ ಮತ್ತು ತರಗತಿಯ ಮೂರು ಹೆಣ್ಣು ಮಕ್ಕಳು ಸಹ Saint Paul's Girls Convent ಶಾಲೆಗೆ ಹೋಗುತ್ತಿದ್ದರು. ಉಳಿದ ನಾನೋರ್ವ ಮಾತ್ರ ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಗೆ ಹೋಗಬೇಕಾಯಿತು. ನಾನು ಅವಾಗ ನಾಲ್ಕನೆ ತರಗತಿಯಲ್ಲಿದ್ದೆ. ಒರಗೆಯ ಅಣ್ಣಂದಿರ-ತಂಗಿಯರ ಯೂನಿಫಾರ್ಮಗಳು, ಪಠ್ಯಪುಸ್ತಕಗಳು, ನೋಟುಬುಕ್ಕುಗಳು, ಟೈ ಬೆಲ್ಟ್ ಇವ್ಯಾವು ನನಗಿಲ್ಲದ್ದರ ಬಗ್ಗೆ ಮರುಗುತ್ತಿದ್ದೆ, ಕೊರಗುತ್ತಿದ್ದೆ, ಕುಗ್ಗುತ್ತಿದ್ದೆ. ನನಗೆ ಗೊತ್ತಿಲ್ಲದೆ ಕೀಳರಿಮೆ ಬೆಳೆಯುತ್ತಾ ಹೋಯಿತು. ನಮ್ಮ ಕನ್ನಡ ಶಾಲೆಗೆ ಯ್ಯೂನಿಫಾರ್ಮ್ ಇತ್ತಾದರೂ ಕಡ್ಡಾಯವಿರಲಿಲ್ಲ. ಶರ್ಟು ಮೊಣಕಾಲಿನವರೆಗೂ ಬರುತ್ತಿದ್ದರೆ ಚಡ್ಡಿಯೂ ಸಹ ಬೇಕಾಗಿರಲಿಲ್ಲ. ನನ್ನ ಶಾಲೆ ಶುರುವಾಗುತ್ತಿದ್ದು ಮಧ್ಯಾಹ್ನ ೧೨.೩೦ಕ್ಕೆ. ಒರಗೆಯವರ ಕಾನ್ವೆಂಟ್ ಶಾಲೆ ಬೆಳಿಗ್ಗೆ ೯ ಗಂಟೆಗೆ. ಸಮಯವಿರುತ್ತಿದ್ದ ಕಾರಣ ಒಮ್ಮೆ ಅವರ ಶಾಲೆಗಳನ್ನು ನೋಡಲು ಅವರಿಗೆ ಗೊತ್ತಿಲ್ಲದಂತೆ ಹೋದೆ. ಅಬ್ಬಬ್ಬಾ! ಆ ದೊಡ್ಡ ಗೇಟುಗಳು, ದೊಡ್ಡ ಸಂಖ್ಯೆಯ ಹುಡುಗ-ಹುಡಗಿಯರ ಸಮೂಹ, ಅವರ ಅಂದ-ಚೆಂದದ ಬ್ಯಾಗುಗಳು, ಯ್ಯೂನಿಫಾರ್ಮಗಳು, ಟೈ ಬೆಲ್ಟುಗಳು, ಪಾಲಿಶ್ನಿಂದಾಗಿ ಪಳ ಪಳ ಹೊಳೆಯುತ್ತಿದ್ದ ಶೂಗಳು ಇವೆಲ್ಲವೂ ನಮ್ಮ ಶಾಲೆ, ನಾನು, ನನ್ನ ಸಹಪಾಠಿಗಳಲ್ಲಿ ಇಲ್ಲದ ಕಾರಣಕ್ಕಾಗಿ ಬಹಳ ನೊಂದುಕೊಳ್ಳುತ್ತಿದ್ದೆ. ಎಲ್ಲರೊಂದಿಗೂ ಮಾತು ತೀರಾ ಕಮ್ಮಿಯಾಯಿತು. ಯಾರೂ ಇಲ್ಲದಾಗ ಬಹಳ ಸಲ ಒಬ್ಬೊಬ್ಬನೇ ಮಾತನಾಡಿಕೊಳ್ಳುತ್ತಿದ್ದೆ. ರಾತ್ರಿ ಮಲಗುತ್ತಿದ್ದ ವೇಳೆ ಅಮ್ಮನನ್ನು ನೆನೆಸಿಕೊಂಡೆ ಬಿಕ್ಕಿ ಬಿಕ್ಕಿ ಅಳುತ್ತಿದ್ದೆ. ಆದರೆ ಈಗ ಹೀಗೆಲ್ಲಾ ಆಗಿದ್ದರ ಬಗ್ಗೆ ನನಗೀಗ ಯಾವುದೇ ಬೇಸರವಿಲ್ಲ, ನನ್ನ ಹೆತ್ತವರಾಗಲೀ, ದೊಡ್ಡಪ್ಪನವರಾಗಲೀ ಯಾವುದನ್ನು ಬಹಳ ಸೂಕ್ಷ್ಮತೆಯಿಂದ ಅವಲೋಕಿಸಿ, ಅಲೋಚಿಸಿ ಹೀಗೆ ಮಾಡಿದ್ದಲ್ಲ. ಏನೋ ಕಾಲದ ಕರೆ ಅಷ್ಟೇ. ಅಂದಿನ ಎಲ್ಲಾ ನೋವುಗಳು ಈಗಿಲ್ಲ. ಹೈಸ್ಕೂಲಿಗೆ ಬರುತ್ತಲೇ  ಕೆಲವು ವ್ಯಸನಗಳು ಮತ್ತು ವಿಲಕ್ಷಣಗಳ ನಡುವೆಯೇ ಅಪ್ಪನನ್ನು ಒಪ್ಪಿಕೊಂಡು ಪ್ರೀತಿಸಲಾರಂಭಿಸಿದೆ. ಅವರೂ ಸಹ. ಆದರೆ ನನ್ನದೇ ರೀತಿಯಲ್ಲಿ ಇವತ್ತಿನ ಕೆಲವು-ಹಲವು ಮಕ್ಕಳು ಇರುವುದು ಕಂಡಾಗ....... ಮಕ್ಕಳ ಬೆಳವಣಿಗೆ, ಶಿಕ್ಷಣ ಒಟ್ಟಾರೆ ಜನಜೀವನವೂ ಎಂಬುದು ಎಂದೆಂದಿಗೂ ತಾರತಮ್ಯವೇ????????

ಇದೇ ಸಂದರ್ಭದಲ್ಲಿ ನಾನು ನಾಲ್ಕನೇ ತರಗತಿಯಲ್ಲಿದ್ದಾಗ ನನ್ನ ಜೀವನಕ್ಕೆ ಮಹತ್ವದ ತಿರುವು ದೊರೆಯಿತು. ಪುನರ್ಜನ್ಮ ದೊರೆತಿದೆಂದು ಹೇಳಿದರೆ ಯಾವುದೇ ಉತ್ಪ್ರೇಕ್ಷೆಯಿಲ್ಲ. ಶಾಲಾ ಮಕ್ಕಳಿಗೆ ವಿಶೇಷವಾಗಿ ಸರ್ಕಾರಿ ಶಾಲಾ ಮಕ್ಕಳಿಗೆ ಡಾ.ಬಿ.ಆರ್. ಅಂಬೇಡ್ಕರ್ ರವರ ಜೀವನಾಧಾರಿತ ಚಲನಚಿತ್ರವನ್ನು ತೋರಿಸುವ ಏರ್ಪಾಡಾಯಿತು. ದಾವಣಗೆರೆಯ ಪಿ.ಬಿ.ರಸ್ತೆಯಲ್ಲಿ ಈಗಲೂ ಇರುವ ಅರುಣ ಚಿತ್ರಮಂದಿರದಲ್ಲಿ ಬಾಬಾ ಸಾಹೇಬರ ಚಲನಚಿತ್ರ ವೀಕ್ಷಿಸುವ ಪುಣ್ಯ ನನ್ನದಾಯಿತು. ಚಿತ್ರ ನೋಡುವಾಗ ಬಿಕ್ಕಿ ಬಿಕ್ಕಿ ಅಳುತ್ತಿದ್ದೆ. ಬುದ್ಧನಿಗೆ ಬೋಧಿ ವೃಕ್ಷದ ಕೆಳಗಡೆ ಜ್ಞಾನದೋಯವಾದರೆ ನನಗೆ ದಾವಣಗೆರೆಯ ಅರುಣ ಚಿತ್ರಮಂದಿರದಲ್ಲಿ. ನನ್ನನ್ನು ನಾನು ಅಂಬೇಡ್ಕರ್ ರವರ ಜಾಗದಲ್ಲಿ, ಪಾತ್ರದಲ್ಲಿ ಭಾವಿಸಿಕೊಂಡೆ. ನಾನು ಸಹ ಈ ನನ್ನೆಲ್ಲಾ ನೋವು, ಅಪಮಾನ, ಕೀಳರಿಮೆಗಳಿಂದ ಹೊರಬಂದು ಸಾಧಕನಾಗಬೇಕೆಂದರೆ ವಿದ್ಯೆಯೊಂದೇ ಸಾಧನ ಎಂಬುದನ್ನು ಚೆನ್ನಾಗಿ ಖಾತ್ರಿ ಮಾಡಿಕೊಂಡೆ. ಅಂಬೇಡ್ಕರ್ ರವರು ನನ್ನ ಮೇಲೆ ಬೀರಿರುವ ಪ್ರಭಾವವನ್ನು ಮಾತುಗಳಲ್ಲಿ ಹೇಳಿದರೆ ಬಹಳ ಕಡಿಮೆಯಾದಿತು, ಸಪ್ಪೆಯಾದಿತು. ಮೇಲ್ವರ್ಗವೆಂದು ಕರೆದುಕೊಳ್ಳುತ್ತಿದ್ದ ಲಿಂಗಾಯಿತರ ಮನೆಯಲ್ಲಿ ಹುಟ್ಡಿದ ಕಾರಣಕ್ಕೋ, ಅಂತಹ ವೈಶಾಲ್ಯದ ಕೊರತೆಯ ಕಾರಣಕ್ಕೊ ಅಲ್ಲಿಯವರೆಗೂ ಅಂಬೇಡ್ಕರ್ ರವರ ಬಗ್ಗೆ ಪರಿಚಯವೇ ಇರಲಿಲ್ಲ. ಸಮುದಾಯದಲ್ಲಿದ್ದ ಎಲ್ಲ ತರಹದ ಅಸ್ಪೃಶ್ಯತೆಯ ಆಚರಣೆಯ ಬಗ್ಗೆ ಅಸಹ್ಯತನ ಅಸಹಾಯಕ ಸ್ಥಿತಿಯಲ್ಲಿ ವ್ಯಕ್ತವಾಗುತ್ತಿದ್ದವು. ಈಗಲೂ ಬಾಡಿಗೆ ಮನೆ ಹಿಡಿಯುವಾಗ ಜಾತಿ ಪದ್ಧತಿಯ ಕ್ರೌರ್ಯದ ಅನುಭವವಾಗುತ್ತಿದೆ.

ಅಂಬೇಡ್ಕರ್ ರವರ ಜೀವನಾಧಾರಿತ ಚಲನಚಿತ್ರ ವೀಕ್ಷಣೆಯ ನಂತರ ವಿದ್ಯೆ ಎಲ್ಲವನ್ನೂ ಗೆಲ್ಲಬಲ್ಲದು, ದೊರಕಿಸಿಕೊಡಬಲ್ಲದು ಎಂಬುದು ಮನದಟ್ಟಾದ ಮೇಲೆ ನಾನು ಬಹಳ ಅಂತರ್ಮುಖಿಯಾದೆ. ಓದಿನಲ್ಲಿ ಪ್ರಗತಿ ಕಾಣಲಾರಂಭಿಸಿತು. ಕೆಲವು ತಿಂಗಳ ನಂತರ ಉತ್ತಮವೆನಿಸಿದ ಪಕ್ಕದ ಕನ್ನಡ ಮಾಧ್ಯಮದ ಖಾಸಗಿ ಶಾಲೆಗೆ ದಾಖಲಿಸಿದರು. ಮರುವರ್ಷದಿಂದ ತರಗತಿ ನಾಯಕನನ್ನಾಗಿ ಶಿಕ್ಷಕರು ನೇಮಿಸಲಾರಂಭಿಸಿದರು. ಮುಂದೆ ಪ್ರೌಢಶಾಲಾ ಹಂತದಲ್ಲಿ ಗಾಂಧೀಜಿಯವರ ಪರಿಚಯವಾಯಿತು. ಗೌರವ ಬೆಳೆಯಿತು. ಅವರ‌ ಬಗ್ಗೆ ಮೊದಲು ಓದಿದ್ದೆ ಅವರ ಆತ್ಮಚರಿತ್ರೆ. National Book Trust ನಿಂದ ಪ್ರಕಟಿತವಾದ ನನ್ನ ಸತ್ಯಾನೇಷ್ವಣೆ ಪುಸ್ತಕ ಬಹುಮಾನವಾಗಿ ಬಂದಿತ್ತು. ಪದವಿ ಹಂತದಲ್ಲಿ ಗಾಂಧೀಜಿ ಮತ್ತು ಅಂಬೇಡ್ಕರ್ ರವರ ನಡುವೆ ತುಲನಾತ್ಮಕ ದೃಷ್ಟಿಕೋನ ಬೆಳೆಯಲಾರಂಭಿಸಿತು. ಗಾಂಧೀಜಿ ಮತ್ತು ಅಂಬೇಡ್ಕರ್ ರವರ ನಡುವೆ ಸಾಮ್ಯತೆ ಮೂಡಿಸುವ, ಮೂಡಿಸುವವರ ಚಿಂತನೆಗಳಿಗೆ ಮಾರು ಹೋದೆ. ಇವೆಲ್ಲದರ ಮಧ್ಯೆಯೇ ಕುಟುಂಬದ ಸಾಮಾಜಿಕ ಹಿನ್ನಲೆಯ ಕಾರಣಕ್ಕಾಗಿ ನನ್ನ ಸಮುದಾಯ ಲಿಂಗಾಯಿತ ವರ್ಗಕ್ಕೆ ಸೇರಿದ್ದರ ಬಗ್ಗೆ ಹೆಮ್ಮೆಯೂ, ಆದರೆ ವಾಸ್ತವದಲ್ಲಿ ಬಸವಣ್ಣನ ಮೂರ್ತಿ ಪೂಜೆ ನಡೆಯುತಿತ್ತೇ ವಿನಃ, ಬಸವಣ್ಣನ ಮತ್ತು ಲಿಂಗಾಯಿತ ಧರ್ಮದ ವಿಚಾರಗಳಿಂದ ಬಹಳ ದೂರವೇ ಉಳಿದಂತಹ ಬದುಕಿನ ಆಚರಣೆಗಳ‌ ಬಗ್ಗೆ ಅಸೈರಣೆ ಬೆಳೆದು ಲಿಂಗಾಯಿತ ಧರ್ಮದ ಬಗ್ಗೆ ಹೊಂದಿದ್ದ ಹೆಮ್ಮೆಯ ಭಾವಕ್ಕಿಂತ ಪಾಪ ಪ್ರಜ್ಞೆ ಕಾಡಲಾರಂಭಿಸಿದೆ. ೬ನೇ ಕ್ಲಾಸಿ‌ನಲ್ಲಿದ್ದಾಗ ಧರಿಸಿದ್ದ ಲಿಂಗು ೧೦ನೇ ಕ್ಲಾಸಿಗೆ ಬರುವ ಹೊತ್ತಿಗೆ ದೂರವಾಗಿತ್ತು.
ಇವೆಲ್ಲದರ ಜೊತೆಗೆ ಬದುಕು ಮತ್ತು ಮನಸ್ಸು ಅಲೆಮಾರಿಯಂತಾಗಿತ್ತು. ಉತ್ತರ ಸಿಕ್ಕಿದ್ದೂ ನೀವು ಮತ್ತು ನಿಮ್ಮ(ನಮ್ಮ) ದೀನಬಂಧು ಸಂಸ್ಥೆಯಲ್ಲಿ. ನನ್ನ ಮಕ್ಕಳು ಸಹ ತಳ ಸಮುದಾಯದ ಮಕ್ಕಳೇ ಹೆಚ್ಚಿಗೆ ಇರುವ ಮತ್ತು ಮಾನವ ಧರ್ಮ ಪಾಲನೆಯಾಗುತ್ತಿರುವ ದೀನಬಂಧು ಶಾಲೆಯಲ್ಲಿ ಕಲಿಯುವಂತಾದರೆ ನಮ್ಮ ಪುಣ್ಯ ಎಂದು ಭಾವಿಸಿ ನಿಮ್ಮ ಆಶೀರ್ವಾದ ಮತ್ತು ಸಾನಿಧ್ಯದಲ್ಲಿದ್ದೇವೆ. ಈ ರೀತಿಯ ಬದುಕು ಆಯ್ಕೆ ಮಾಡಿಕೊಂಡ ಬಗ್ಗೆ ಬಹಳ ಹೆಮ್ಮೆಯಿದೆ.
ಇತ್ತೀಚೆಗೆ ‌ಅಸುರನ್ ಅಂತಾ ತಮಿಳು‌ ಚಲನಚಿತ್ರ‌ ಬಹಳ ಸುದ್ಧಿ ಮಾಡಿತ್ತು. ಧನುಷ್ ಅಭಿನಯದ ಚಲನಚಿತ್ರ. ನಮ್ಮ‌‌ಹಲವು ಪ್ರಗತಿಪರಮಿತ್ರರು,‌ ದಸಂಸ ಸಂಘಟನೆ ಇನ್ನೂ ಮುಂತಾದವರು ಬಹಳ ಮೆಚ್ಚಿ ಸಾಮಾಜಿಕ‌ ಜಾಲತಾಣದಲ್ಲಿ ಮಾತಾಡಿದ್ರು. ನಾನು ಕೂಡ ಸಿನೆಮಾ‌ ನೋಡಿದ್ದೆ. ಸಿನೆಮಾದ ತಿರುಳು, ಭೂಮಾಲೀಕರ ಶೋಷಣೆಗೆ ಒಳಗಾದ ತಳ ಸಮುದಾಯದವರು ಸಿಡಿದೇಳುತ್ತಾರೆ. ಎರಡೂ‌ ಕಡೆ ಕೊಲೆ ಸಾವುಗಳಾಗುತ್ತವೆ. ಕೊನೆಯಲ್ಲಿ ಶೋಷಿತ ಸಮುದಾಯದ ಮಗ ಮಾಡಿದ‌ ಕೊಲೆಯನ್ನು ತನ್ನ ಮೇಲೆ‌ ಹೊತ್ತು ಜೈಲಿಗೆ ಹೋಗಲು ಸಿದ್ಧನಾದ ನಾಯಕ ಪಾತ್ರಧಾರಿ "ನಮ್ಮತ್ರ ಹಣ, ಆಸ್ತಿ ಇದ್ರೆ‌ ಸುಲಭವಾಗಿ ಬೇರೆಯವರು ಕಬಳಿಸಬಹುದು. ಆದರೆ ವಿದ್ಯೆ ನಮ್ಮ ಆದ್ಯತೆಯಾದರೆ‌ ಯಾರಿಂದಲೂ ಕಬಳಿಸಲು ಸಾಧ್ಯವಿಲ್ಲ. ವಿದ್ಯೆಯಿಂದ ಅಧಿಕಾರ, ಅಧಿಕಾರದಿಂದ ಸ್ವಾಭಿಮಾನ ಮತ್ತು ಆತ್ಮಗೌರವದ ಬದುಕು‌‌ ಕಟ್ಟಿಕೊಳ್ಳಲು ಸಾಧ್ಯ ಅಂತೇಳ್ತಾನೆ" ರೋಷ‌‌ ಆವೇಶದಲ್ಲಿದ್ದ‌ ಕುದಿಯಿತ್ತಿದ್ದ ಮಗನಿಗೆ ಶಿಕ್ಷಣ ಎಷ್ಟು ಮುಖ್ಯವೆಂದು ತಿಳಿಸುತ್ತಾನೆ. ನಮ್ಮ‌‌ ಆದೆಷ್ಟೋ‌ ಬಡಾಯಿ‌ ಚಳವಳಿಕಾರರಿಗಿಂತ‌, ಹುಸಿ ಓರಟು(ಹೋರಾಟ)ಗಾರರಿಗಿಂತ ದೀನಬಂಧು ಸಂಸ್ಥೆ ಮಾಡುತ್ತಿರುವುದು ಎಷ್ಟೊದು ಮಹತ್ಕಾರ್ಯವಲ್ಲವೇ ಎಂದು ನೆನೆದು ಕಣ್ಣಾಲಿಗಳು ಖುಷಿ,ಸಾರ್ಥ‌ಕ ಮತ್ತು ಸಂತೃಪ್ತ ಭಾವದಿಂದ ಒದ್ದೆಯಾದವು. ದೀನಬಂಧು ಸಂಸ್ಥೆಯು ಶೋಷಿತ ಮತ್ತು ತಳ ಸಮುದಾಯದ ಏಳಿಗಾಗಿ ದುಡಿಯುತ್ತಿರುವ‌ ಪ್ರಮಾಣಿಕ ಸಂಸ್ಥೆ. ಎಲ್ಲಾ ಕಾಲದ ಜಟಿಲತೆಗಳಿಗೂ, ಸಮಸ್ಯೆಗಳಿಗೂ, ಸಾವಲುಗಳಿಗೂ ಉತ್ತರ ಮತ್ತು ಪರಿಹಾರವಾಗಬಲ್ಲ ನನ್ನ ಬಾಬಾ ಸಾಹೇಬರ ಮತ್ತು ಗಾಂಧೀಜಿಯವರ ಚಿಂತನೆಗಳನ್ನು ಹಾಗೂ ಬುದ್ಧ, ರಮಣ, ರಾಮಕೃಷ್ಣರ ಆಧ್ಯಾತ್ಮವನ್ನು ಸಕಾರಗೊಳಿಸುತ್ತಿರುವ ದೀನಬಂಧು‌ ಸಂಸ್ಥೆಯ ದೀನಬಂಧು ಆತ್ಮಗಳ ನಡುವೆ ಎಂದೆಂದಿಗೂ ಇದೇ ರೀತಿಯಲ್ಲಿ ಮಾನವೀಯ ಅಂತಃಕರಣ ಜಾಗೃತವಾಗಿರಲಿ ಎಂದು ಹೃನ್ಮನದಿಂದ, ಸತ್ಕಂಪನದಿಂದ ಆಶಿಸುತ್ತೇನೆ, ಹಾರೈಸುತ್ತೇನೆ.

ನಿಮ್ಮ ಆಶೀರ್ವಾದ ಸದಾ ನನ್ನ ಮೇಲಿರುತ್ತದೆಂಬ ಆಶಾಭಾವದಿಂದ.
ಗಿರೀಶ ಟಿ. ಪಿ.


With

Comments


Write a comment...

Friday, 6 March 2020

It is so simple to be happy but it is so difficult to be SIMPLE

*It is so simple to be happy, but it is so difficult to be simple.*

ಅನಾಥನಾಗಿರಲಿ, ತುಂಬಿದ ಕುಟುಂಬದ ಸದಸ್ಯನಾಗಿರಲಿ..
ವಿವಾಹಿತನಾಗಿರಲಿ, ಅವಿವಾಹಿತನಾಗಿರಲಿ..
ಅಕ್ಷರಸ್ಥನಾಗಿರಲಿ, ಅನಕ್ಷರಸ್ಥನಾಗಿರಲಿ..
MA, Mcom, MSc, MBA, MTech,MBBS Phd ಇತ್ಯಾದಿ ಏನಾರ ಓದಿರಲಿ, ಓದದಿರಲಿ..
IIT, IIM, JNU, ವಿದೇಶದ ಯಾವುದೇ ಪ್ರಖ್ಯಾತ ಕಾಲೇಜು, ವಿಶ್ವವಿದ್ಯಾಲಯದಲ್ಲಿ ಓದಿರಲಿ, ಓದದಿರಲಿ..
ರೈತನಾಗಿರಲಿ, ವೈದ್ಯನಾಗಿರಲಿ.. 
ಶಿಕ್ಷಕನಾಗಿರಲಿ, ಕ್ಷೌರಿಕನಾಗಿರಲಿ..
ಪ್ರಾಧ್ಯಾಪಕನಾಗಿರಲಿ, ಪೌರಕಾರ್ಮಿಕನಾಗಿರಲಿ..
 ಚಿತ್ರಕಾರನಾಗಿರಲಿ, ಸಾಹಿತಿಯಾಗಿರಲಿ..
 ಕುಬೇರನಾಗಿರಲಿ, ಕೂಲಿಕಾರ್ಮಿಕನಾಗಿರಲಿ..
 ಎಮ್ಮೆ‌ ಕಾಯುವನಾಗಿರಲಿ, ಉದ್ಯಮಿಯಾಗಿರಲಿ..
ಬಡವನಾಗಿರಲಿ, ಸಿರಿವಂತನಾಗಿರಲಿ..
ಸಮಾಜಸೇವಕನಾಗಿರಲಿ, ಸಾಮಾನ್ಯ ಸೇವಕನಾಗಿರಲಿ..
ಸ್ವಾಮೀಜಿಯಾಗಿರಲಿ, ಸನ್ಯಾಸಿಯಾಗಿರಲಿ..
ನಾಸ್ತಿಕನೋ, ಆಸ್ತಿಕನೋ..
ಲೌಕಿಕನೋ, ಅಲೌಕಿಕನೋ..
ಸಂಸಾರಿಯೋ, ಅಲೆಮಾರಿಯೋ..
ಅನುಭೋಗಿಯೋ, ಆಧ್ಯಾತ್ಮಿಯೋ..
ಅಹಂಕಾರಿಯೋ, ನಿರಹಂಕಾರಿಯೋ..
ಒಟ್ಟಿನಲ್ಲಿ ನಾವು ಈ ಹೊರ ಪ್ರಪಂಚಕ್ಕೆ ತೋರುವಂತೆ ಎಲ್ಲಿಯಾರೆ ಏನಾರೆ ಓದಿರಲಿ, ಓದದಿರಲಿ.. ಏನಾರ ಆಗಿರಲಿ, ಆಗದಿರಲಿ..
ವೃತ್ತಿಯಲ್ಲಿ ಉನ್ನತ, ಅತ್ಯುನ್ನತ ಆರ್ಥಿಕ ಭದ್ರತೆಯಯುಳ್ಳ ಯಾವುದೇ ಉದ್ಯೋಗದಲ್ಲಿರಲಿ,
ಆರ್ಥಿಕ ಭದ್ರತೆಯಿಲ್ಲದ ಸಾಧರಣ ಸಾಮಾನ್ಯ ಯಾವುದೇ ಕೂಲಿ, ಉದ್ಯೋಗವಿರಲಿ.. ----------

ಮಾನವೀಯ ಅಂತಃಕರಣವಿಲ್ಲದಿದ್ದರೆ ಏನಿದ್ದರೂ ಏನಿಲ್ಲದಂತೆ.
ಅನ್ಯರಿಗೆ ಬೇಸರವಾಗದ ರೀತಿಯಲ್ಲಿ ನಮ್ಮ ಅಸಂತೋಷವನ್ನು, ಅಸಮ್ಮತಿಯನ್ನು ಅಭಿಪ್ರಾಯಬೇಧವನ್ನು ವ್ಯಕ್ತಪಡಿಸಲು ಆಗದಿದ್ದರೆ, ನಡೆದಷ್ಟೆ ನುಡಿಯಲು, ನುಡಿದಂತೆ ನಡೆಯಲು ಸಾಧ್ಯಾವಾಗದಿದ್ದರೆ, ತನ್ನನ್ನು ತಾನು ಸಂಪೂರ್ಣವಾಗಿ ಅರಿತು ತನ್ಮೂಲಕ ಭಗವಂತನನ್ನು ಸಾಕ್ಷಾತ್ಕಾರ ಮಾಡಿಕೊಳ್ಳಲು ಸಾಧ್ಯವಿಲ್ಲ ಮತ್ತು ಈ ಸಲುವಾಗಿ ಮಾಡುವ ಕಾಯಕ/ಕರ್ಮಗಳೆಲ್ಲವೂ ಅರ್ಥಹೀನ.

*It is so simple to be happy but it is so difficult to be simple.*

Girisha T P.

ಮಕ್ಕಳಲ್ಲಿ ಸರ್ವತೋಮುಖ ಬೆಳವಣಿಗೆ ಹೇಗೆ

ಮಕ್ಕಳಲ್ಲಿ 'ಸರ್ವಾಂಗೀಣ/ಸರ್ವತೋಮುಖ ಅಭಿವೃದ್ಧಿ/ವಿಕಾಸವೆಂದರೆ..
  ಮಕ್ಕಳಲ್ಲಿ ಪಂಚಮುಖಿ ಬೆಳವಣಿಯಾಗಬೇಕು.
 ೧. ಶಾರೀರಿಕವಾಗಿ
೨. ಬೌದ್ಧಿಕವಾಗಿ
೩. ಭಾವನಾತ್ಮಕವಾಗಿ
೪. ಸಾಮಾಜಿಕವಾಗಿ
೫. ನೈತಿಕವಾಗಿ

೧. ಶಾರೀರಿಕ ಒಳ್ಳೆಯ ಆಹಾರ, ವ್ಯಾಯಾಮ ಮತ್ತು ಆರೋಗ್ಯಕರ ಪರಿಸರ ಶಾರೀರಿಕ ಬೆಳವಣಿಗೆಗೆ ಬುನಾದಿ. ಮಧ್ಯಾಹ್ನದ ಬಿಸಿಯೂಟ ಯೋಜನೆ, ಯೋಗ ಮತ್ತು ಕ್ರೀಡೆ, ಸ್ವಚ್ಚತಾ ಕೆಲಸಗಳು & ಉತ್ತಮ ಭೌತಿಕ ಸಂಪನ್ಮೂಲಗಳು ಶಾರೀರಿಕ ಬೆಳವಣಿಗೆಗೆ ನಮ್ಮ ಶಾಲೆಯಲ್ಲಿರುವ ಅವಕಾಶಗಳು.

೨. ಬೌದ್ಧಿಕತೆ ಗರಿಷ್ಠ ಪ್ರಚೋದನೆ ಮತ್ತು ಶಿಕ್ಷಣ ಬೌದ್ಧಿಕ ಬೆಳವಣಿಗೆಗೆ ಸಹಕಾರಿ. ಮಕ್ಮಳು ಕಲಿಯುತ್ತಿಲ್ಲವೆಂದಾದಲ್ಲಿ ನಾವು ಮಕ್ಕಳನ್ನು ಕಲಿಕೆಯೆಡೆಗೆ ಪ್ರೇರೆಪಿಸುವಲ್ಲಿ ಯಶಸ್ವಿಯಾಗಿಲ್ಲವೆಂದೇ ಅರ್ಥ. ಕೆಳಗಿನ ಶಾಲೆಗಳಿಂದ ಮಕ್ಕಳು ಏನೂ ಕಲಿಯದೇ ಬರುತ್ತಾರೆ ಎಂಬ ಕಾರಣ ತೀರಾ ಹಳತಾದುದು. ಈಗ ಅದು ನೆಪವಷ್ಟೇ. ಪರಿಹಾರ ಬೋಧನೆ ಎಂಬ ಚಿಕಿತ್ಸಕ ಶೈಕ್ಷಣಿಕ ಉಪಕಾರ್ಯಕ್ರಮದ ಬಗ್ಗೆ ಹೆಚ್ಚಿನವರಲ್ಲಿ ನಕಾರಾತ್ಮಕ ಭಾವನೆಯೇ  ಮೈದಳೆದಿರುವಾಗ ಮಕ್ಕಳನ್ನು ಬೌದ್ಧಿಕವಾಗಿ ಸಶಕ್ತಗೊಳಿಸುವುದು ಹೇಗೆ ?

೩. ಭಾವನಾತ್ಮಕತೆ. ಪ್ರೀತಿ, ಆಸರೆ, ಸುರಕ್ಷಿತ ಭಾವನೆ, ಹಿತಕಾರಿಯಾದ ಜನ, ಆತ್ಮೀಯತೆ ಮತ್ತು ಆಪ್ತತೆಯ ವಾತಾವರಣ ಮಗುವಿನ ಭಾವನಾತ್ಮಕ ಬೆಳವಣಿಗೆಗೆ ಸಹಕಾರಿ.  ಸಾಧ್ಯವಾದಷ್ಟು ಮಟ್ಟಿಗೆ ಶಾಲೆಯಲ್ಲಿರುವ ಎಲ್ಲಾ ಮಕ್ಕಳ ಹೆಸರಾದರೂ ತಿಳಿದಿರಬೇಕು, ಮಕ್ಕಳ ಕುಶಲಕ್ಷೇಮ ವಿಚಾರಿಸಿಕೊಳ್ಳಬೇಕು, ಆಗಾಗ್ಗೆ ವೈಯಕ್ತಿಕವಾಗಿ ಮಾತನಾಡಿಸಬೇಕು ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸದ, ಭಾಗವಹಿಸಲು ಹಿಂಜರಿಯುವ ಮಕ್ಕಳೊಂದಿಗೆ ಆಪ್ತ ಸಮಾಲೋಚನೆ ನಡೆಸಬೇಕು. ಮಕ್ಕಳ ಇಷ್ಟ-ಕಷ್ಟಗಳ ಬಗೆಗಿನ ಅರಿವು ಬೆಳೆಸಿಕೊಳ್ಳಬೇಕು.

೪. ಸಾಮಾಜಿಕತೆ  ಸೌಹಾರ್ದ ಸಂಬಂಧ, ಮಾದರಿ ಪಾತ್ರಗಳು, ಒಳ್ಳೆಯ ತರಬೇತಿ, ಶ್ರೇಷ್ಠ ನಡವಳಿಕೆಗಳ ಪ್ರದರ್ಶನ ಮಕ್ಕಳ ಸಮಾಜಿಕ ಬೆಳವಣಿಗೆಗೆ ಕಾರಣವಾಗಬಲ್ಲದು. ವಿವಿಧ ಸಮಾಜಿಕ ಹಿನ್ನಲೆಯುಳ್ಳ ಮಕ್ಕಳ ಮನೆಗಳ ಪರಸ್ಪರ ಭೇಟಿ ಇದಕ್ಕೆ ಪೂರಕವಾಗಬಲ್ಲದು. ವಿವಿಧ ಸಮುದಾಯಗಳ ವಿಭಿನ್ನ ಆಚರಣೆಗಳ ಪರಿಚಯ ಮತ್ತು ಅವುಗಳಲ್ಲಿ ಭಾಗವಹಿಸುವುದು ಸಹ ಸಮಾಜಿಕ ಬೆಳವಣಿಗೆಗೆ ಪ್ರೇರಕವಾಗಬಲ್ಲದು.

೫. ನೈತಿಕತೆ ಸರಿ-ತಪ್ಪುಗಳ ಸರಿಯಾದ ವ್ಯಾಖ್ಯಾನ, ನ್ಯಾಯ, ಧರ್ಮಗಳ ಬಗ್ಗೆ ಅರಿವು, ಸ್ವಹಿತಕ್ಕಿಷ್ಟು-ಪರಹಿತಕ್ಕಿಷ್ಟು ಪ್ರಾಮುಖ್ಯತೆ ಬಗೆಗಿನ ತಿಳಿವು ನೈತಿಕ ವಿಕಾಸಕ್ಕೆ ನೆರವಾಗಬಲ್ಲದು. ಉತ್ತಮ ಚಿತ್ರಗಳನ್ನು ವೀಕ್ಷಣೆ ಮಾಡಲು ವ್ಯವಸ್ಥೆ ಮಾಡುವುದು, ಕಥೆಗಳನ್ನು ಹೇಳುವುದು ಮತ್ತು ಹೇಳಿಸುವುದು, ತಪ್ಪಿತಸ್ಥ ಮಕ್ಕಳನ್ನು ತಿದ್ದುವ ರೀತಿ ನೈತಿಕತೆ ಬೆಳೆಸುವಲ್ಲಿ ಪ್ರಮುಖವಾಗುತ್ತವೆ. .........................................................

ಈ ಮೇಲಿನ ಐದು ಅಂಶಗಳ ಬೆಳವಣಿಗೆ ಮತ್ತು ವಿಕಾಸಕ್ಕೆ ಶಾಲೆಯಲ್ಲಿ ಇರುವ ವಿನೂತನ ಆಯಾಮಗಳನ್ನು, ಅವಕಾಶಗಳನ್ನು ಸ್ನೇಹಿತರು, ಹಿರಿಯರು ಪರಿಚಯ ಮಾಡಿಕೊಡಿ.

  'ಸದೃಢವಾದ ದೇಹದಲ್ಲಿ ಸದೃಢವಾದ ಮನಸ್ಸು ನಿರ್ಮಾಣವಾಗುತ್ತದೆ.' ಸದೃಢವಾದ ಶಾರೀರಿಕತೆ, ಬೌದ್ಧಿಕತೆ, ಭಾವನಾತ್ಮಕತೆ, ಸಮಾಜಿಕತೆ ಮತ್ತು ನೈತಿಕತೆ ನಿರ್ಮಿಸುವಲ್ಲಿ ನೀವುಗಳು ನಿಮ್ಮ ಶಾಲೆಯಲ್ಲಿ ಜಾರಿಗೊಳಿಸಿರುವ, ಜಾರಿಗೊಳಿಸಬೇಕೆಂದಿರುವ ವಿನೂತನ ಕ್ರಮಗಳ ಬಗ್ಗೆ ತಮ್ಮ ಅನುಭವ ಮತ್ತು ಸಲಹೆಗಳನ್ನು ಹಂಚಿಕೊಳ್ಳಿರಿ. -----------------------------------------------------

 ಇತ್ತೀಚಿನ ದಿನಗಳಲ್ಲಿ ನಾವುಗಳು, ಪಾಲಕ-ಪೋಷಕರು ಬೌದ್ಧಿಕ ಬೆಳವಣಿಗೆಗೆ ಮಾತ್ರ ಹೆಚ್ಚಿನ ಒತ್ತಾಸೆ ನೀಡುತ್ತಿದ್ದೆವೆ. ಮಕ್ಕಳು ಪರೀಕ್ಷೆಯಲ್ಲಿ ಗಳಿಸುವ ಫಲಿತಾಂಶ, ಅಂಕಗಳ ಮೇಲೆಯೇ ನಮಗೆ ಹೆಚ್ಚಿನ ಗಮನ.

ಉದಾಹರಣೆಗೆ: ಇತ್ತೀಚೆಗೆ ಕ್ರೀಡೆ, ಪ್ರತಿಭಾಕಾರಂಜಿ ಕಾರ್ಯಕ್ರಮಗಳು ಮುಗಿದವು. ಹೆಚ್ಚು-ಕಡಿಮೆ ಆ ಕ್ಷಣದಲ್ಲಿ ಎಲ್ಲರೂ ಆಸಕ್ತಿಯಿಂದ ಭಾಗವಹಿಸಿದ್ದೆವೆ. ಆ ಎಲ್ಲಾ ಸ್ಪರ್ಧೆಗಳು, ಕಾರ್ಯಕ್ರಮಗಳು ಮುಗಿದ ಮೇಲೆ 'ಈ ಹಾಳಾದ್ದೂ sports, ಪ್ರತಿಭಾ ಕಾರಂಜಿಯಿಂದ syllabus cover ಆಗಲೇ ಇಲ್ಲ, ಮುಗೀಲೆ ಇಲ್ಲ' ಎಂದೂ ಗೊಣಗಿದ್ದೇವೆ. ನಮ್ಮ ಹೆಚ್ಚಿನ ಶಿಕ್ಷಕರ ಬಾಯಿಂದ ಬರುವುದು 'ಡಿಸೆಂಬರ್ ಹೊತ್ತಿಗೆ Syllabus Cover ಮಾಡಬೇಕು, ಮುಗಿಸಬೇಕು' ಅಂತಾ. Actually Syllabus has to be open in front of students and not be covered. ನಾವು ಬೌದ್ಧಿಕತೆ ಕುರಿತಂತೆ ಈ ರೀತಿಯಲ್ಲಿ ಅವೈಜ್ಞಾನಿಕವಾಗಿ ಹೆಚ್ಚಿನ ಆಕ್ರಮಣಶೀಲ ಒತ್ತಾಸೆ ನೀಡುತ್ತಿರುವುದರಿಂದ ಸಾಕಷ್ಟು ಮಕ್ಕಳು ನಕಾರಾತ್ಮಕ ಭಾವನೆಗಳಿಂದ ಬಳಲುವರು. ಇತರರೊಡನೇ ಹೊಂದಿಕೊಳ್ಳುವದೇ, ಹಂಚಿಕೊಳ್ಳದೇ ಸ್ವಾರ್ಥಿಗಳಾಗುತ್ತಿದ್ದಾರೆ. ಗುರಿ ಮುಖ್ಯವೇ ಹೊರತು ಮಾರ್ಗ ಮುಖ್ಯವಲ್ಲ ಎಂಬ ಧೋರಣೆ ಬೆಳೆಸಿಕೊಳ್ಳುತ್ತಿದ್ದಾರೆ. SSLC ಪರೀಕ್ಷಾ ರೀತಿ-ನೀತಿಗಿಂತ ಬೇರೆ ಉದಾಹರಣೆ ಬೇಕಿಲ್ಲ. ಎಳವೆಯಲ್ಲಿ ಕಂಡ ರುಚಿ‌‌ಗಾಗಿ ಜೀವನದ ಉದ್ದಕ್ಕೂ ಹಂಬಲಿಸುತ್ತಾರೆ. ಹೀಗೆ ಮುಂದುವರೆದಲ್ಲಿ  ಮಕ್ಕಳಲ್ಲಿ/ಹದಿಹರೆಯದವರಲ್ಲಿ ಆನೇಕಾನೇಕ ನಡವಳಿಕೆ ದೋಷಗಳು ಕಂಡು ಬರುತ್ತವೆ, ಅವರಲ್ಲಿ ಕೀಳರಿಮೆ, ಆಕ್ರಮಣಶೀಲತೆ, ಆತ್ಮಹತ್ಯೆಯಂತಹ  ದುರಾಲೋಚನೆಗಳು, ಸಮಾಜ ವಿರೋಧಿ ಭಾವನೆಗಳು ಕಂಡುಬರುತ್ತಿವೆ. ಈ ಹಿನ್ನಲೆಯಲ್ಲಿ ಪೋಷಕರಾಗಿ, ಶಿಕ್ಷಕರಾಗಿ, ಅದರಲ್ಲೂ ಒಂದು ಶಾಲೆಯ ಮುಖ್ಯಸ್ಥರಾಗಿ ಪ್ರಸ್ತುತ ಸನ್ನಿವೇಶದಲ್ಲಿ‌ ನಮ್ಮ ಜವಬ್ದಾರಿ ಮತ್ತು ಹೊಣೆಗಾರಿಕೆಗಳು ಹೆಚ್ಚಿನದಾಗಿವೆ. ನಾವು ಮಕ್ಕಳ ಮನೋವಿಜ್ಞಾನದ ಕುರಿತು ಹೆಚ್ಚಿನ ಜ್ಞಾರ್ನಾಜನೆ ಮಾಡಬೇಕಾಗಿದೆ. -

 ಗಿರೀಶ ಟಿ. ಪಿ. ಸ.ಪ್ರೌ.ಶಾಲೆ, ಹಾದೀಕೆರೆ, ತರೀಕೆರೆ ತಾ.
೯೯೦೦೭೦೦೨೪೯

SSLC ಪರೀಕ್ಷಾ ಫಲಿತಾಂಶವನ್ನು ಉತ್ತಮಪಡಿಸುವುದು ಹೇಗೆ...???

SSLC ಪರೀಕ್ಷಾ ಫಲಿತಾಂಶ ಸುಧಾರಿಸಬೇಕೆಂದರೆ ನಾಲ್ಕು ಹಂತದ ಯೋಜನೆಗಳಿರಬೇಕು.

*1. ತೀರಾ ಕನಿಷ್ಟದ ಅವಧಿ*
ಅಂದರೆ ಪ್ರಸಕ್ತ ಸಾಲಿನಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳನ್ನೇ ಗುರಿಯಾಗಿಸಿ ಶೈಕ್ಷಣಿಕ ವರ್ಷದ ಪ್ರಾರಂಭದಿಂದಲೇ ಫಲಿತಾಂಶ ಸುಧಾರಣೆಗಾಗಿ ಕಾರ್ಯಕ್ರಮ ರೂಪಿಸುವುದು.

*2. ಕನಿಷ್ಟ ಅವಧಿ*
10ನೇ ತರಗತಿಯೊಂದರ ಫಲಿತಾಂಶ ಗುಣಾತ್ಮಕವಾಗಿ ಸುಧಾರಿಸಬೇಕೆಂದರೆ ಮಗು ಪ್ರೌಢಶಾಲೆಯ ಕನಿಷ್ಟ ತರಗತಿಗೆ ಅಂದರೆ 8ನೇ ತರಗತಿಗೆ ದಾಖಲಾದ ಪ್ರಾರಂಭದಿಂದಲೇ
*ಸ್ಪಷ್ಟ ಓದು, ಶುದ್ಧ ಬರಹ ಮತ್ತು ಸುಲಭ ಲೆಕ್ಕಾಚಾರ*ದ ಕಾರ್ಯಕ್ರಮ ಬಹಳ ವೈಜ್ಞಾನಿಕವಾಗಿ, ಯೋಜನಬದ್ಧವಾಗಿ ಜಾರಿಗೊಳಿಸಬೇಕು.

*10ನೇ ತರಗತಿಯಲ್ಲಿ ತೆಗೆದುಕೊಳ್ಳುವ ವಿಶೇಷ ತರಗತಿಗಳು 8ನೇ ತರಗತಿಯಿಂದಲೇ ಅನುಷ್ಠಾನವಾಗಬೇಕು.

*10ನೇ ತರಗತಿಯಲ್ಲಿನ ವಿಶೇಷ ತರಗತಿಗಳ ಸ್ವರೂಪ ಬದಲಾಗಬೇಕು(ಶಿಕ್ಷಕರ ಬೋಧನೆಯಿಂದ ಹೊರಗುಳಿದು ವಿದ್ಯಾರ್ಥಿಗಳ ಸ್ವಯಂ ಕಲಿಕೆಗೆ ಉತ್ತೇಜನವಿರಬೇಕು.

ಯಾವುದೇ ಹಂತದಲ್ಲೂ
*ಊಟ-ಆಟ-ಪಾಠ* ಈ‌ ನೀತಿಯೊಳಗೆ ಯಾವುದು ಹೆಚ್ಚು-ಕಡಿಮೆಯಾಗಬಾರದು.

ಊಟದಿಂದ ದೇಹಕ್ಕೆ ಶಕ್ತಿ & ಮನಸ್ಸು ಸದೃಡ.
ಆಟದಿಂದ ದೇಹ ಮತ್ತು ಮನಸ್ಸಿಗೆ ಮನೋರಂಜನೆ.
ಪಾಠದಿಂದ ಬೌದ್ಧಿಕ ವಿಕಾಸ.

*3.ಧೀರ್ಘ ಅವಧಿ*
5 ಇಲ್ಲವೇ 6ನೇ ತರಗತಿಯಿಂದಲೇ
ಸ್ಪಷ್ಟ ಓದು, ಶುದ್ಧ ಬರಹ ಮತ್ತು ಸುಲಭ ಲೆಕ್ಕಾಚಾರದ ಸೂತ್ರ ಅನುಷ್ಠಾನಗೊಂಡರೆ ಮಗು ಗರಿಷ್ಟಮಟ್ಟದಲ್ಲಿ ಜ್ಞಾನ ಕಟ್ಟಿಕೊಳ್ಳಬಲ್ಲದು.

ಆದರೇ ಇಲ್ಲಿಯೇ ಸಮಸ್ಯೆಯಿರುವುದು. ಪ್ರೌಢಶಾಲೆಗಳಲ್ಲಿ ವಿಷಯವಾರು ಶಿಕ್ಷಕರು ಇರುವಾಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ವಿಷಯವಾರು ಶಿಕ್ಷಕರು ಇರುವುದಿಲ್ಲ.
ಪ್ರೌಢಶಾಲಾ ಶಿಕ್ಷಕರು ಮತ್ತು ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರ ನಡುವೆ ಉತ್ತಮ ಸಂವಹನವಿರಬೇಕು.
*ಪ್ರೌಢಶಾಲಾ ಶಿಕ್ಷಕರು ಪ್ರಾಥಮಿಕ ಶಾಲೆಯತ್ತ ತೆರಳಬೇಕು* ಅಲ್ಲಿಯ ಮಕ್ಕಳ ಕಲಿಕಾ ಸ್ಥಿತಿಯನ್ನು ಕುರಿತು ಎರಡೂ ಶಾಲೆಯ ಶಿಕ್ಷಕರು ಕುಳಿತು ಚರ್ಚಿಸಿ ಪರಿಹಾರ ಕಂಡುಕೊಳ್ಳುವಂತಹ ಅನ್ಯೋನ್ಯತೆಯಿರಬೇಕು. ಪ್ರೌಢಶಾಲಾ ಶಿಕ್ಷಕರಿಗಿಂತ ಪ್ರಾಥಮಿಕ ಶಾಲಾ ಶಿಕ್ಷಕರ ಮೇಲೆ ಹೆಚ್ಚಿನ ಕೆಲಸದೊತ್ತಡ ಇರುವುದೊಂತು ಸತ್ಯ. ಹಾಗೆಯೇ ಎಲ್ಲಾ ಪ್ರೌಢಶಾಲೆಗಳಲ್ಲಿ ಬಹುತೇಕ ಶಿಕ್ಷಕರ ಕಾರ್ಯಹಂಚಿಕೆಯಲ್ಲಿ ಸಮಾನತೆಯಿಲ್ಲ.
ಕೆಲವರಿಗೆ 36, 24 ಅವಧಿಗಳು ಇದ್ದರೆ, ಇನ್ನೂ ಕೆಲವರಿಗೆ 12, 15 18ಕ್ಕೆ ನಿಲ್ಲುತ್ತದೆ.

ಒಟ್ಟಾರೆಯಾಗಿ ಹೇಳುವುದಾದರೆ SSLC ಪರೀಕ್ಷಾ ಫಲಿತಾಂಶವೋ ಅಥವಾ ಒಂದು ಮಗುವಿನ ಶೈಕ್ಷಣಿಕ ಸ್ಥಿತಿಗತಿ ಸುಧಾರಿಸುವಲ್ಲಿ ಆ ಮಗು ಎಲ್ಲಿಂದ ಶಿಕ್ಷಣ ಆರಂಭಿಸುತ್ತದೆಯೋ ಅಂತಾ ಪ್ರಾರಂಭಿಕ ಹಂತದಿಂದಲೂ ಸುಧಾರಣಾ,ಚಿಕಿತ್ಸಕ ಕ್ರಿಯಾ ಯೋಜನಾ ಕಾರ್ಯಕ್ರಮಗಳಿರಬೇಕು‌. ಕೇವಲ ಕಾರ್ಯಕ್ರಮಗಳಿದ್ದರೆ ಸಾಲದು. ಈಗಾಗಲೇ KSQAAC, SAS ಮತ್ತಿತರ ಕಾರ್ಯಕ್ರಮಗಳಿದ್ದರೂ ಕೇವಲ ದತ್ತಾಂಶಗಳಾಗಿ ಮಾತ್ರ ಉಳಿದಿವೆ. ಅಳತೆ ಮಾಡಲಾಗುತ್ತಿದೆ, ದೋಷ ಪತ್ತೆ ಮಾಡಲಾಗುತ್ತಿದೆ. ಪರಿಹಾರವೇನೆಂದು ಗೊತ್ತಿದೆ. ಆದಾಗ್ಯೂ ಪರಿಹಾರ ಜಾರಿಯಾಗುತ್ತಿಲ್ಲ.

*4.ಕೊನೆಯ ಹಂತ ಮತ್ತು ಅತೀ‌ ಧೀರ್ಘ ಅವಧಿಯದ್ದು*
ಮಗುವಿನ ಶಿಕ್ಷಣ ಪ್ರಾರಂಭಗೊಳ್ಳುವ ಹಂತದಿಂದ
A) ತಾಯಿಯಿಂದ/ಮನೆಯಿಂದ
B) ಪೂರ್ವ ಪ್ರಾಥಮಿಕ ಶಿಕ್ಷಣದಿಂದ
C) ಪ್ರಾಥಮಿಕ ಶಿಕ್ಷಣದ ಅವಧಿಯಿಂದ.

ಇಲ್ಲಿಯ ಕಲಿಕಾ & ಮೌಲ್ಯಮಾಪನ ಪದ್ಧತಿಗೂ,
SSLCಯಲ್ಲಿನ ಕಲಿಕಾ ಮತ್ತು ಮೌಲ್ಯಮಾಪನ ಪದ್ದತಿಗೂ ತಾಳಮೇಳವಿಲ್ಲವೆಂದರೆ,
ಸೂಕ್ತ ಕೊಂಡಿಯಿಲ್ಲವೆಂದರೇ

SSLC/PUC ಪರೀಕ್ಷೆಗೆ ಸಿದ್ಧತೆ ಮಾಡುವುದು
*ಯುದ್ಧಕಾಲೇನಾ ಶಸ್ತ್ರಾಭ್ಯಾಸ*ಎಂಬಂತಾಗುತ್ತದೆ.

****************************

SSLC ಯಲ್ಲಿ ಅನುತ್ತೀರ್ಣಗೊಂಡ ಯಾವಾ ವಿದ್ಯಾರ್ಥಿಯ ಭವಿಷ್ಯವೂ ಮುಸುಕಾಗುವುದಿಲ್ಲ.
ಅಂದಾಹಾಗೇ ನಮ್ಮಿಂದ ಹೇಗೆಗೋ‌ ಉತ್ತೀರ್ಣವಾದಂತಹ ಮಕ್ಕಳು ಏನಾಗೂತ್ತಿದ್ದಾರೆ ಎಂದು ಯೋಚನೆ ಮಾಡಿದ್ದೇವಾ !
ಕನಿಷ್ಟ ಅಂಕ ಪಡೆದು ಉತ್ತೀರ್ಣವಾದಂತಹ ಹೆಚ್ಚಿನ ವಿದ್ಯಾರ್ಥಿಗಳು ಕಲಾ ವಿಭಾಗ ಸೇರುತ್ತಿದ್ದಾರೆ.

ಸರಾಸರಿ ಅಂಕ ಪಡೆದವರು ವಾಣಿಜ್ಯ ವಿಭಾಗ, ಡಿಪ್ಲೋಮಾ/ಐಟಿಐ ವಿಭಾಗಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಇನ್ನುಳಿದವರು ವಿಜ್ಞಾನ.

ಈ ವರ್ಷ PUCಕಲಾ ವಿಭಾಗದಲ್ಲಿನ‌ ಫಲಿತಾಂಶ ಶೇ 35% ಮಾತ್ರ.
ನಮ್ಮಲ್ಲಿ ಫೇಲಾಗಬೇಕಾದವರು ಅಥವಾ ಸುಧಾರಿಸಬೇಕಾದವರು PUCನಲ್ಲಿ ಹಿನ್ನಡೆ ಅನುಭವಿಸಿದ್ದಾರೆ.

ಹೆಚ್ಚಿನ ಪ್ರೌಢಶಾಲಾ ಶಿಕ್ಷಕರುಗಳು ಪ್ರಾಥಮಿಕ ಶಾಲಾ ಶಿಕ್ಷಣವನ್ನು ಮತ್ತು ಅಲ್ಲಿಯ ಶಿಕ್ಷಕರನ್ನು ದೂರುತ್ತೆವೆ.
ಆದರೆ ಪಿಯು ಕಾಲೇಜಿನ ಉಪನ್ಯಾಸಕರು ನಮ್ಮನ್ನು ಹೀಗಳೆಯುತ್ತಿರುವುದು/ದೂಷಿಸುತ್ತಿರುವುದು ನಮಗೆ ಕೇಳುತ್ತಲೇ ಇಲ್ಲವೆಂಬಂತೆ ಇದ್ದೇವೆ.

ಅಷ್ಟಾಗಿಯೂ ಈ SSLC ಫಲಿತಾಂಶ
ಉತ್ತೀರ್ಣ ಮತ್ತು ಅನುತ್ತೀರ್ಣತೆ ಯಾವುದನ್ನ ಆಧರಿಸಿದೆ ??

ಕೇವಲ ಮೂರು ಭಾಷೆಗಳು ಮತ್ತು ಮೂರು ಕೋರ್ ವಿಷಯಗಳು..
ಶಿಕ್ಷಣವೆಂದರೇ ಇವಿಷ್ಟೆಯೇ !!!!????

ಪ್ರಾಥಮಿಕ ಹಂತದಿಂದ ಪ್ರೌಢ ಶಿಕ್ಷಣದವರೆಗೆ ಎಲ್ಲಾ ಶಿಕ್ಷಕರು, ಇಲಾಖೆಯ ಕಿರಿಯ ಅಧಿಕಾರಿಗಳಿಂದ ಹಿರಿಯ ಅಧಿಕಾರಿಗಳವರೆಗೆ ಸಂಯೋಜನೆಯಿಂದ, ಸಹಕಾರದಿಂದ ಒಂದು ತಂಡವಾಗಿ ಕಾರ್ಯೋನ್ಮುಖರಾದರೇ ಎಂತಹಾ ಪರೀಕ್ಷೆಗಳನ್ನಾದರೂ ಎದುರಿಸಿ, ಯಶಗಳಿಸಬಹುದು.

ಶೀಘ್ರ ಅಥವಾ ಧಿಡೀರ್ ಪ್ರಗತಿಯಿಂದ ನಾವು ಹಿಗ್ಗಲೂಬಾರದು
ಮತ್ತು
ಶೀಘ್ರ ಅಥವಾ ಧಿಡೀರ್ ಕುಸಿತದಿಂದ ನಾವು ಕುಗ್ಗಲೂಬಾರದು, ಕುಸಿಯಲೂಬಾರದು.

*ಧೀಡಿರ್ ಗೆಲುವು & ಸೋಲುಗಳಲ್ಲಿಯೇ ನಮ್ಮ ಅಃತಶಕ್ತಿಯ ಪರೀಕ್ಷೆ ಅಡಗಿರುವುದು.*

*ಗುಣಮಟ್ಟದ ಕೆಲಸಕ್ಕೆ ಸಾಕಷ್ಟು ಸಮಯ, ಸಂಯಮ ಎರಡೂ ಬೇಕು.*
ಆಗ ಸ್ಥಿತಪ್ರಜ್ಞನ ಸ್ಥಿತಿ ತಲುಪಿದಾಗ ಎಂತಹ ಸೋಲುಗಳು ಬಂದರೂ ಆವೇಶಕ್ಕೆ ನಮ್ಮನ್ನು ನಾವು ಒಪ್ಪಿಸಿಕೊಳ್ಳುವುದಿಲ್ಲ.

*ಅತ್ಯಂತ ನಾಟಕೀಯ ನಡೆಯೆಂದರೆ
ಭೌಗೋಳಿಕವಾಗಿ-ನೈಸರ್ಗಿಕವಾಗಿ
ಧಾರ್ಮಿಕವಾಗಿ,
ಸಾಮಾಜಿಕವಾಗಿ,
ರಾಜಕೀಯವಾಗಿ,
ಶೈಕ್ಷಣಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಬಹಳಷ್ಟು ವೈವಿಧ್ಯಮಯ ಹಿನ್ಮಲೆ ಹೊಂದಿರುವ‌ ಜಿಲ್ಲೆಗಳ ನಡುವೆ Ranking ನಿರ್ಧರಿಸುವುದು.

ಅಬ್ಬಾ! ಇದಕ್ಕಿಂತ ಅಮಾನವೀಯ ನಡೆ ಇನ್ನೊಂದಿಲ್ಲ.

ಒಂದು ಮಗುವಿನ ಸಂಪೂರ್ಣ ಏಳಿಗೆಯ ಬಗ್ಗೆ, ಆಕೆಯ/ಆತನ ಕೊರತೆಗಳ ನಡುವೆಯೇ ಪ್ರಬಲರನ್ನಾಗಿಸುವ ಮನಸ್ಥಿತಿ ನಮ್ಮದಾದರೇ ನಮ್ಮೆಲ್ಲಾ ವೈಯುಕ್ತಿಕ ಹಿತಾಸಕ್ತಿಗಳನ್ನು ಬದಿಗೊತ್ತಿ ಸಮಷ್ಟಿಗಾಗಿ ದುಡಿಯಬಹುದು.

ಜೀವನ ದೊಡ್ಡದು.‌ ಪ್ರತಿಯೊರ್ವನ ಜೀವನದಲ್ಲೂ ಸಾಕಷ್ಟು ಏಳು-ಬೀಳುಗಳಿರುತ್ತವೆ.
ಶೈಕ್ಷಣಿಕ ವರ್ಷಗಳ ಪರೀಕ್ಷೆಗಳಿಗಿಂತ ಜೀವನದ ಪರೀಕ್ಷೆಗಳನ್ನು ಎದುರಿಸುವುದು ಮುಖ್ಯ.

*ಸರ್ಕಾರಿ ಶಾಲೆಯೇ ಇರಲೀ, ಅನುದಾನಿತ ಶಾಲೆಯೇ ಆಗಲೀ ಶಿಕ್ಷಣ ಇಲಾಖೆಯವರು ನಾವ್ಯಾಕೆ ನಮ್ಮ ಮಕ್ಕಳನ್ನು ನಮ್ಮದೇ ಶಾಲೆಗೆ‌ ಸೇರಿಸಿ ಕಲಿಸುವುದಿಲ್ಲ????*
*ಯಾಕಂದ್ರೆ ನಮ್ಮ ನಮ್ಮ ಬಂಡವಾಳ ನಮಗೆ ಚೆನ್ನಾಗಿ ಗೊತ್ತಲ್ಲಾ ಅದಕ್ಕೆ, ಶಿಕ್ಷಣ ಇಲಾಖೆಯವರಾದ ನಾವೇ ನಮ್ಮ ಮಕ್ಕಳನ್ನು ನಮ್ಮಮ್ಮ ಶಾಲೆಗ ಕಳುಹಿಸುವುದಿಲ್ಲವೆಂದ ಮೇಲೇ ಉಳಿದ ಸರ್ಕಾರಿ ನೌಕರರು ಹೇಗೆ ದಾಖಲಿಸುತ್ತಾರೆ??*

*ಹೋಟೆಲ್ಲೊಂದರ ಮಾಲೀಕ ತನ್ನ ಹೋಟೆಲ್ಲಿಗೆ ಬರುವ‌ ಗ್ರಾಹಕರ ಎದುರಿಗೆ/ಜೊತೆಗೆ ತನ್ನ ಹೋಟೆಲ್ಲಿನ ಊಟವನ್ನು ಪ್ರತಿನಿತ್ಯ ಮಾಡುತ್ತಾನೇಂದರೆ ಆ ಹೋಟೆಲ್ಲಿನ ವಿಶ್ವಾಸರ್ಹತೆ ಹೆಚ್ಚಿಸಿದಂತೆ*

*ನಮ್ಮ ಇಲಾಖೆಯ ಡಿ. ದರ್ಜೆಯಿಂದ ಹಿಡಿದು ನಿರ್ದೇಶಕರವರೆಗಿನ ಹಂತದವರೆಗಿನ ಎಷ್ಟು ಮಂದಿ ತಮ್ಮ ಮಕ್ಕಳನ್ನು ತಮ್ಮದೇ ಸರ್ಕಾರಿ ಶಾಲೆಗಳಲ್ಲಿ ಕಲಿಸಿದ್ದಾರೆ!???*

*ನಮ್ಮವೆಲ್ಲಾ ಆತ್ಮವಂಚನೆಯ ನಡೆಗಳು, ಆತ್ಮಸಾಕ್ಷಿಗೆ ವಿರುದ್ಧವಾದ ನುಡಿಗಳು*

*ಶಿಕ್ಷಕರಲ್ಲಿ ಬಹುತೇಕ ಶಿಕ್ಷಕರು ತಮ್ಮ ಮಕ್ಕಳು ಶಿಕ್ಷಕರಾಗಲೀ/ಉಪನ್ಯಾಸಕರಾಗಲೀ ಎಂದು ಅಪೇಕ್ಷಿಸುವುದಿಲ್ಲ, ಮತ್ತೇ ಮಕ್ಕಳೇನಾದರೂ ನಮ್ಮ ವೃತ್ತಿಯನ್ನು ಆಯ್ಕೆಮಾಡಿಕೊಳ್ಳುವ ಇಚ್ಚೆ ವ್ಯಕ್ತಪಡಿಸಿದರೆ, ಮೊದಲು ತಡೆಯೊಡ್ಡವರು ನಾವೇ. ಈ ಎಲ್ಲಾ ವಿಚಾರಗಳಲ್ಲಿ ಅಪವಾದಗಳಿವೆ.*

*ಆರ್ಥಿಕವಾಗಿ‌ ಹೆಚ್ಚು ಹಣಕಾಸು‌ ದೊರೆಯುವ‌ ಇಂಜಿನಿಯರ್/ಡಾಕ್ಟರ್ ವೃತ್ತಿಗಳೇ ಆಗಬೇಕು ನಮಗೆ.*

ಒಟ್ಟಿನಲ್ಲಿ ನಮ್ಮ ವೃತ್ತಿ ನಮ್ಮ ಆತ್ಮಗೌರವವನ್ನು ಹೆಚ್ಚಿಸಿಲ್ಲವೆಂದ ಮೇಲೆ ಈ ಸರ್ಕಾರಿ ಶಾಲೆ ಮಕ್ಕಳ‌ ಗುಣಮಟ್ಟದ ಕಲಿಕೆ ಬಗ್ಗೆ ನಾವೇಗೆ ಕ್ರಿಯಾಶೀಲರಾಗಿ ದುಡಿಯಲು ಸಾಧ್ಯ.

*SSLC ಪರೀಕ್ಷಾ ಫಲಿತಾಂಶ ಸುಧಾರಣೆ ಬಗ್ಗೆ ಇಷ್ಟೆಲ್ಲಾ ಮಾತನಾಡುವಾಗ ಅಥವಾ ಮಾತನಾಡುವ ಬದಲು, ನಾನೋರ್ವ ಶಿಕ್ಷಕ ಎನ್ನುವುದನ್ನು ಮರೆತು, ಹಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆಯೊಂದರಲ್ಲಿ ಕಲಿಯುತ್ತಿರುವ ಮಗುವಿನ ಹೆತ್ತವನಾಗಿ ಯೋಚಿಸಿದರೆ,*

*ಮೊದಲು ತರಗತಿಗೊಂದರಂತೆ ಶಿಕ್ಷಕರನ್ನು ಕೊಡಿ, ನೇಮಿಸಿ* ಆಮೇಲೆ ನೋಡಿ, ಕೇಳಿ ನಮ್ಮ ಸರ್ಕಾರಿ ಶಾಲೆಗಳ ಸ್ಥಿತಿಗತಿಯನ್ನ, ಗುಣಮಟ್ಟದ ಫಲಿತಾಂಶವನ್ನ. ಅಂತಾ ಒಳ ಮನಸ್ಸು ಬಡಿದುಕೊಳ್ಳುತ್ತದೆ.


ಆದರೆ ಪ್ರಾಥಮಿಕ ಶಾಲೆಗೆ ಶಿಕ್ಷಕರನ್ನು ಕೊಡಲು ಹೊರಟ ಸಹೃದಯರನ್ನೇ ಅಪಾದಿತರ ಸ್ಥಿತಿಯಲ್ಲಿ ಮಾನಸಿಕ‌ ಹಿಂಸೆ ನೀಡುವ ವ್ಯವಸ್ಥೆ ಇರುವಾಗ ಇಷ್ಟೆಲ್ಲಾ ಮಾತಾನಾಡಿದ್ದು ವ್ಯರ್ಥ.

*ಮೊದಲು ಪ್ರಾಥಮಿಕ ಶಾಲೆಗಳಲ್ಲಿ ತರಗತಿಗೊಂದರಂತೆ ಶಿಕ್ಷಕರ ನೇಮಕವಾಗಬೇಕು.
*ಅಧಿಕೃತವಾಗಿ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ ಪ್ರಾರಂಭಿಸಬೇಕು.
*ಗುಣಮಟ್ಟದ ಭಾಷಾ‌ ಕಲಿಕಾ ವಾತಾವರಣ ಸೃಜಿಸಬೇಕು.
*ಕನ್ನಡ ಮತ್ತು ಕನ್ನಡದಲ್ಲಿ ಕಲಿತವರಿಗೆ ಅವಕಾಶಗಳನ್ನು ಇಮ್ಮಡಿಗೊಳಿಸಿ, ಸೃಷ್ಟಿಸಬೇಕು.
*ಭ್ರಷ್ಟಾಚಾರ ಮುಕ್ತ ಅಧಿಕಾರಿಗಳ ಆಡಳಿತ ಜಾರಿಯಾಗಬೇಕು.

*ಮಕ್ಕಳ ಕಲಿಕೆಯ ಮೌಲ್ಯಮಾಪನದಲ್ಲೇ ಇಷ್ಟೆಲ್ಲಾ ಅವಾಂತರ, ಇನ್ನೂ ಶಿಕ್ಷಕರ ಕಾಯಕದ ಮೌಲ್ಯಮಾಪನ ಪ್ರಾರಂಭವಾದರೇ ?
ಶಿಕ್ಷಕರ ಕೆಲಸದ ಮೌಲ್ಯಮಾಪನಕ್ಕೆ ಶಿಕ್ಷಕರನ್ನು ಸಜ್ಜುಗೊಳಿಸಬೇಕು.
* ಶಿಕ್ಷಕರ‌ ಸಂಬಳ-ಸೇವಾ ಸೌಲಭ್ಯಗಳನ್ನು ಹೆಚ್ಚಿಸಬೇಕು.
ನಮ್ಮ ಇಲಾಖೆಯ ಜೊತೆಗೆ ಯಾವುದೇ ಇಲಾಖೆಯ ಲಿಪಿಕ ನೌಕರರು, ಅಧಿಕಾರಿಗಳು ಶಿಕ್ಷಕರಿಂದ ಲಂಚ ಕೇಳಬಾರದು, ನಮ್ಮ ಸೇವಾ-ಸೌಲಭ್ಯಗಳನ್ನು ನೀಡುವಲ್ಲಿ ಯಾವುದೇ ಆಮಿಷಗಳನ್ನು ಒಡ್ಡಬಾರದು.‌ ಆ ರೀತಿಯಲ್ಲಿ ನಮ್ಮ ವ್ಯಕ್ತಿತ್ವವಿರಬೇಕು.
* ಶಿಕ್ಷಕರ ಕೇತ್ರದಿಂದ MLC ಆಗಿಯಾಗಿ ಆಯ್ಕೆಯಾಗುವ ಪದ್ದತಿಯನ್ನು ಕೊನೆಗಾಣಿಸಬೇಕು.
MLC ಚುನಾವಣೆಗಳಲ್ಲಿ ನಮ್ಮ ನೈತಿಕ ಅದಃಪತನ ಕಾಣಬಹುದು. ಅವರಂಚುವ ಹೆಂಡ, ಪೆನ್ನುಗಳು ಸಾಕು, ಕೊಡಿಸುವ ಊಟವೂ‌ ಸಾಕು.
ನಮ್ಮ ವೃತ್ತಿಯ ಘನತೆಯನ್ನು, ನಮ್ಮ ಆತ್ಮಗೌರವವನ್ನು, ಸ್ವಾಭಿಮಾನವನ್ನು ಕಳೆದುಕೊಳ್ಳುವುದಕ್ಕೆ ಈ ಚುನಾವಣೆಗಳು.

ಹಾಗಯೇ ಪ್ರತಿವರ್ಷದ‌ ಸೆಪ್ಟೆಂಬರ್‌-೦೫ರ‌‌ ಶಿಕ್ಷಕರ‌‌ ದಿನಾಚರಣೆ ದೊಂಬರಾಟವಾಗಿದೆ.
ವಿಶೇಷ ಉಪನ್ಯಾಸ ನೀಡಲು ವಾರದ ಹಿಂದೆಯೇ ಸಾಕಷ್ಟು ತಯಾರಿ ಮಾಡಿಕೊಂಡು ಬರುವ ಅತಿಥಿಗೆ ಮಾತು ಬೇಗ ಮಗಿಸಬೇಕೆಂದ ಒತ್ತಡ.

ಶಿಕ್ಷಕರ‌ ದಿನಾಚರಣೆಯ ಹಿಂದಿನ‌ ರಾತ್ರಿ ನಮ್ಮ ಸಂಘದ ಪದಾಧಿಕಾರಿಗಳು ಮತ್ತವರ ಸ್ನೇಹಿತರನ್ನು ಮಾತನಾಡಿಸಿ ತೋದಲು ನುಡಿಗಳನ್ನು ಆಲಿಸಿ, ಆನಂದಿಸಿ😡...


ಬದಲಾವಣೆ ಜಗದ ನಿಯಮ.
ವರ್ತನೆಯಲ್ಲಾದ ಪರಿವರ್ತನೆಯೇ ಕಲಿಕೆ ಎಂದೇಳುತ್ತೇವೆ.

ಆದರೆ ನಮ್ಮ ವರ್ತನೆಯಲ್ಲಿ ಮಗು ಅಪೇಕ್ಷಿತ‌ ಯಾವುದೇ ಪರಿವರ್ತನೆ ಮಾಡಿಕೊಳ್ಳದೇ, ಕಲಿಯಲು ನಮ್ಮನ್ನು ನಾವು ಸಿದ್ಧಗೊಳಿಸಿಕೊಳ್ಳದೇ, ಮಕ್ಕಳಿಗೆ‌‌ ಮಾತ್ರ ಒತ್ತಡ ಹಾಕುತ್ತೆವೆ.

ಸತ್ಯವಾಗಿ‌ ನುಡಿಯುವವರನ್ನೇ, ಪ್ರಮಾಣಿಕವಾಗಿ‌ ನಡೆದುಕೊಳ್ಳುವವರನ್ನೆ ಗುರಿಯಾಗಿಸಿ ಹಿಂಸಿಸಲಾಗುತ್ತದೆ.

ಬದಲಾವಣೆ ಎಲ್ಲರಿಂದ ಎಲ್ಲ ದಿಕ್ಕುಗಳಿಂದ ಆಗಲೀ.

*-ಗಿರೀಶ.ಟಿ.ಪಿ. ಶಿಕ್ಷಕ, ಮೊದಲಿಗೂ ಮತ್ತು ಕಡೆಗೂ. ಮುಖ್ಯಶಿಕ್ಷಕ ಆಗಿದ್ದು ಆಕಸ್ಮಿಕ.*